ಶಾಲಾ ಮಕ್ಕಳಿಗೆ ಶ್ರೀಗಳಿಂದ ಅಕ್ಷರಾಭ್ಯಾಸ
ಡಿ.ಎಂ.ಎಸ್. ಜ್ಞಾನಕುಟೀರ ಶಾಲಾ ಮಕ್ಕಳಿಗೆ ತ್ರಿನೇತ್ರ ಶ್ರೀಗಳಿಂದ ಅಕ್ಷರಾಭ್ಯಾಸ
ಪಾಂಡವಪುರ ತಾಲ್ಲೂಕಿನ ಬೇಬಿ ಗ್ರಾಮದಲ್ಲಿರುವ ಡಿ.ಎಂ.ಎಸ್. ಜ್ಞಾನಕುಟೀರ ಶಾಲೆಯಲ್ಲಿ ಆಯೋಜಿಸಿದ್ದ ‘ಓಂಕಾರ ಅಕ್ಷರಾಭ್ಯಾಸ ಕಾರ್ಯಕ್ರಮ’ಕ್ಕೆ ಡಾ. ಶ್ರೀ ಶ್ರೀ ತ್ರಿನೇತ್ರ ಮಹಂತ ಶಿವಯೋಗಿ ಸ್ವಾಮಿಗಳವರಿಗೆ ಪಾದಪೂಜೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ ಶಾಲಾ ಮಕ್ಕಳಿಗೆ ಶ್ರೀಗಳು ನಾಲಗೆಯ ಮೇಲೆ ಸರಸ್ವತಿ ಬೀಜಾಕ್ಷರಿ ಮಂತ್ರವನ್ನು ಬರೆದು, ಅಕ್ಕಿಯ ಮೇಲೆ ಓಂಕಾರ ಅಭ್ಯಾಸವನ್ನು ಶ್ರೀಗಳು ಮಾಡಿಸಿ ಮಕ್ಕಳಿಗೆ ಹರಸಿ ಆಶೀರ್ವದಿಸಿದರು. ಪೋಷಕರನ್ನುದ್ದೇಶಿಸಿ ಮಾತನಾಡಿದ ಶ್ರೀಗಳು, ಮಕ್ಕಳು ಸರಿದಾರಿಯಲ್ಲಿ ಸಾಗಬೇಕಾದರೆ ಶಿಕ್ಷಕರು ಹಾಗೂ ಪೋಷಕರ ಪಾತ್ರ ಅಗತ್ಯವಾದುದು. ಇವರಿಬ್ಬರ ಮಾರ್ಗದರ್ಶನ ಸರಿಯಾಗಿದ್ದರೆ ಮಾತ್ರ ನಿಮ್ಮ ಮಕ್ಕಳು ಉನ್ನತ ಕ್ಷೇತ್ರದಲ್ಲಿ ಬೆಳೆಯಲು ಸಾಧ್ಯ. ಸಾಮಾನ್ಯವಾಗಿ ಮಕ್ಕಳಿಗೆ ಅಕ್ಷರಾಭ್ಯಾಸ ಮಾಡಿಸಲು ಪೋಷಕರುಗಳು ದೂರದ ಸ್ಥಳಗಳಿಗೆ ತೆರಳುತ್ತಾರೆ. ಈ ನಿಟ್ಟಿನಲ್ಲಿ ನಮ್ಮ ಶಾಲಾ ಮಕ್ಕಳ ಜ್ಞಾನಾರ್ಜನೆಗಾಗಿ ನಮ್ಮ ಶಾಲಾ ವತಿಯಿಂದ ಅಕ್ಷರಾಭ್ಯಾಸ ಮಾಡಿಸಿರುವುದು ವಿಶೇಷ ಎಂದರು. ಇದೇ ಸಂದರ್ಭದಲ್ಲಿ ಶಾಲಾ ಕಾರ್ಯ ನಿರ್ದೇಶಕರಾದ ಸುಮ ಸಂಜಯ್, ಆಡಳಿತಾಧಿಕಾರಿಗಳಾದ ಶ್ರೀ ಚಿಕ್ಕತಿಮ್ಮಯ್ಯ, ಕೆ.ಎ.ಎಸ್. (ನಿ.) ಹಾಗೂ ಶಿಕ್ಷಕ-ಶಿಕ್ಷಕಿಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

