ಮೈಸೂರು: ಮುಸುಕಿನ ಜೋಳ ತಿಂದು ಜಮೀನಿನಲ್ಲೇ ತಂಗಿದ್ದ ಮರಿಯಾನೆ ಸೆರೆ

ಮೈಸೂರು: ಜಿಲ್ಲೆಯ ಸರಗೂರು ತಾಲೂಕಿನ ದಡದಹಳ್ಳಿಯ ಜಮೀನಿನಲ್ಲಿ ಬೆಳೆದಿರುವ ಮುಸುಕಿನ ಜೋಳ ತಿಂದು, ಅಲ್ಲಿಯೇ ಬಿಡಾರ ಹೂಡಿದ್ದ ಸುಮಾರು ಮೂರು ವರ್ಷದ ಆನೆ ಮರಿಯನ್ನು ಸಾಕಾನೆಗಳ ಸಹಾಯದಿಂದ ಸೆರೆ ಹಿಡಿಯಲಾಗಿದೆ.
ದಡದಹಳ್ಳಿ ಗ್ರಾಮದ ರೈತ ಮಹಿಳೆಯೊಬ್ಬರ ಜಮೀನಿನಲ್ಲಿ ತಂಗಿದ್ದ ಗಂಡು ಆನೆ ಮರಿಯೊಂದು ಬೆಳೆಯನ್ನು ತಿಂದು, ತುಳಿದು ನಷ್ಟ ಮಾಡಿತ್ತು. ಗ್ರಾಮದ ದಿ. ಚೆನ್ನಯ್ಯ ಅವರ ಪತ್ನಿ ಸಣ್ಣಮ್ಮ ಎಂಬುವರು, ತಮ್ಮ ಮೂರು ಎಕರೆ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದಾರೆ. ಕಟಾವಿಗೆ ಬಂದಿದ್ದ ಬೆಳೆಯನ್ನು ಆನೆ ಮರಿಯು ತಿಂದು ನಾಶಪಡಿಸುತ್ತಿರುವ ಬಗ್ಗೆ ಅರಣ್ಯ ಇಲಾಖೆಗೆ ಅವರು ಮಾಹಿತಿ ನೀಡಿದ್ದರು.
ಬಳಿಕ ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಯು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ರಾಂಪುರ ಆನೆ ಕ್ಯಾಂಪಿನಿಂದ ಹಿರಣ್ಯ, ಧರ್ಮ ಹಾಗೂ ಪಾರ್ಥಸಾರಥಿ ಎಂಬ ಸಾಕಾನೆಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾರ್ಯಾಚರಣೆ ನಡೆಸಿ, ಆನೆ ಮರಿಯನ್ನು ಬುಧವಾರ ಸಂಜೆ ಸೆರೆಹಿಡಿದಿದ್ದಾರೆ.
ರಾಂಪುರ ಕ್ಯಾಂಪ್ಗೆ ಸ್ಥಳಾಂತರ: ಆನೆ ಮರಿಯನ್ನು ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವ್ಯಾಪ್ತಿಯಲ್ಲಿರುವ ರಾಂಪುರ ಸಾಕಾನೆಗಳ ಶಿಬಿರಕ್ಕೆ ಕರೆದುಕೊಂಡು ಹೋಗಲಾಯಿತು
